ರಿಪ್ಪನ್ಪೇಟೆ: ಕೆರೆಹಳ್ಳಿ ಹೋಬಳಿಯ ಗವಟೂರು ಗ್ರಾಮದ ಸರ್ವೇ ನಂ. 260/2ರಲ್ಲಿ 2 ಎಕರೆ 5 ಗುಂಟೆ ಪ್ರದೇಶವನ್ನು 1991-92ನೇ ಸಾಲಿನಲ್ಲಿ 23 ಮಂದಿ ಫಲಾನುಭವಿಗಳಿಗೆ ಆಶ್ರಯ ನಿವೇಶನಗಳಿಗಾಗಿ ಮಂಜೂರು ಮಾಡಲಾಗಿತ್ತು. ಆದರೆ ಹಲವು ವರ್ಷಗಳಾದರೂ ಬಡಾವಣೆ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾರ್ಯಗಳು ಆರಂಭವಾಗದೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ, ಒತ್ತುವರಿ ತೆರವುಗೊಳಿಸಿ ಅಭಿವೃದ್ಧಿ ಕಾಮಗಾರಿಗಳನ್ನು ತಕ್ಷಣ ಕೈಗೊಳ್ಳುವಂತೆ ಒತ್ತಾಯಿಸಿ ಹೋರಾಟಗಾರರು ಪಟ್ಟಣದ ನಾಡಕಚೇರಿಯಲ್ಲಿ ಉಪ ತಹಶೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಕುರಿತು ಮಾನ್ಯ ಕಂದಾಯ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾಧಿಕಾರಿಗಳು ಭೂಮಿಯನ್ನು ರಿಪ್ಪನ್ಪೇಟೆ ಗ್ರಾಮ ಪಂಚಾಯತಿಗೆ ಹಸ್ತಾಂತರಿಸಿ ಅಭಿವೃದ್ಧಿಪಡಿಸಲು ಈಗಾಗಲೇ ಆದೇಶ ನೀಡಿದ್ದರು. ಅದರಂತೆ ಹೊಸನಗರ ತಹಶೀಲ್ದಾರ್ ಅವರು ಮೇ 5, 2026ರಂದು ಕೆರೆಹಳ್ಳಿ ರಾಜಸ್ವ ನಿರೀಕ್ಷಕರಿಗೆ ಖಾಸಗಿ ವ್ಯಕ್ತಿಗಳ ಅನಧಿಕೃತ ಒತ್ತುವರಿಯನ್ನು ತೆರವುಗೊಳಿಸಿ, ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆದು ವರದಿ ಸಲ್ಲಿಸುವಂತೆ ಸೂಚಿಸಿದ್ದರು.
ಆದರೆ ಇದುವರೆಗೆ ಸಂಪೂರ್ಣ ಒತ್ತುವರಿ ತೆರವು ಕಾರ್ಯ ನಡೆಯದಿರುವುದರಿಂದ ಸ್ಥಳೀಯರು ಹಾಗೂ ಫಲಾನುಭವಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೂಡಲೇ ಸರ್ಕಾರ ಅಗತ್ಯ ಕ್ರಮ ಕೈಗೊಂಡು ಭೂಮಿಯನ್ನು ತೆರವುಗೊಳಿಸಿ ಆಶ್ರಯ ಬಡಾವಣೆ ನಿರ್ಮಾಣದ ಜೊತೆಗೆ ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ವರದರಾಜ್, ಸ್ಥಳೀಯ ಮುಖಂಡ ಶೇಖರಪ್ಪ ಸೇರಿದಂತೆ ಹಲವು ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.






